Contact Angle Touch Studio for your Blog Design. Visit Site

ಮಾಸ್ಕಾಯನ (ಹಾಸ್ಯ)ಪ್ರಬಂಧ

3 min read

(ಫೋಟೋ ಕೃಪೆ:- ಗೂಗಲ್)
'ಮಾಸ್ಕ್' ಒಂದೊಮ್ಮೆ ವಿರಳವಾಗಿ ಬಳಕೆಗೆ ಬರುತ್ತಿದ್ದ ಪದ ಮತ್ತು ವಸ್ತು. ಕನ್ನಡಕ್ಕೆ ತರ್ಜುಮೆಮಾಡಿದರೆ ಮುಖವಾಡ ಅಥವಾ ಮುಖ ಕವಚ. ಎರಡೂ ಪದಗಳು ಒಂದೇ ಅರ್ಥ ಹೋಲುವುದಾದರೂ, ಬಳಕೆಯಲ್ಲಿ ವ್ಯತ್ಯಾಸಗಳಿವೆ. ಮುಖ ಪೂರ್ತಿ ಮುಚ್ಚಿದರೆ ಮುಖವಾಡವೆಂದೂ, ಮೂಗಿನಿಂದ ಕೆಳಗೆ ಮಾತ್ರ ಮುಚ್ಚಿದರೆ ಮುಖ ಕವಚವೆಂದು ಬಳಕೆ. ದೇಹದಿಂದ ಹೊರಭಾಗಕ್ಕೆ ಇರುವ ನೇರ - ದಿಟ್ಟ  - ನಿರಂತರ ಸಂಪರ್ಕ ಮಾರ್ಗವೆಂದರೆ 'ಶ್ವಾಸೋಚ್ವಾಸ ಪ್ರಕ್ರಿಯೆ'. ತಜ್ಞವೈದ್ಯರ ನಿಗಮನದಂತೆ, ಹರಡುತ್ತಿರುವ ಕೊರೋನ (Covid-19) ರೋಗಾಣು ಶರೀರ ದ್ರವದ ಮುಖಾಂತರ ಗಾಳಿಯಲ್ಲಿ ಹರಡುವ ಸಾಧ್ಯತೆ ಹೆಚ್ಚು. ಆ ಮೂಲಕ ಮಾನವ ಜೀವನದಲ್ಲಿ ರಂಗ ಪ್ರವೇಶಿಸಿದ ಮಾಸ್ಕ್ 'ಅಡುಗೆಯಲ್ಲಿ ಉಪ್ಪಿನಂತೆ' ಜೀವನದಲ್ಲಿ ಅನಿವಾರ್ಯವಾಗುತ್ತಿದೆ.

"ಮಾಸ್... ಮಾಸ್..." ಅಂತ ನಾಲಿಗೆ ಉರುಳದೆ ಚಡಪಡಿಸುತ್ತಿದ್ದ ಅಜ್ಜಿ, ಈಗ ತಿಂಗಳು ಒಂದರೊಳಗೆ ಚೆನ್ನಾಗಿಯೇ ಹೇಳುತ್ತಿದ್ದಾರೆ. ಹೆಸರು ಬಾಯಿಗೆ ಬಾರದೆ, ಟಿ.ವಿ. ನೋಡಿ ತಿಳಿದ ಜನರು 'ಮುಖದ ಕಾಚ' ಅಂತ ಗುರುತಿಸಿದ್ದೂ ಉಂಟು. ಹಿಂದಿಯ ಮೂಲಕ ಬಂದ ಹೆಸರು ಈಗ ಕೆಲವು ಕಡೆ 'ಮೂ-ಕಿ-ಕಾಚ' ಅಂತ ಪ್ರಸಿದ್ಧಿಯಲ್ಲಿ ಇದೆ.ಹೆಸರು ಬಾಯಿಗೆ ಬಾರದಿದ್ದರೂ ಬಟ್ಟೆ ತುಂಡು ಬಾಯಿಗೆ ಬಂದರೆ ಸಾಕು ಅಂತ ವಿಧಿ. ತುಂಡು ಬಟ್ಟೆಗೆ ನಾಲ್ಕು ಬಟ್ಟೆಯ ದಾರ ಸೇರಿಸಿ ಹೊಲೆದುಕೊಟ್ಟ ಮೂಕಿಕಾಚಗಳು, ಅಜ್ಜನ ಲಂಗೋಟಿಗಿಂತ ಹೆಚ್ಚು ವ್ಯತ್ಯಾಸ ಇಲ್ಲ. ಪುರಂದರ ದಾಸರು ಹೇಳಿದ್ದು ನೆನಪಾಗುತ್ತದೆ,

"ಲಂಗೋಟಿ ಬಲು ಒಳ್ಳೇದಣ್ಣ.....

ಮಡಿವಂತರಾ ಮಿತ್ರ

ಮಡಿವಾಳರಾ ಶತ್ರು

ಲಂಗೋಟಿ ಬಲು ಒಳ್ಳೇದಣ್ಣ....."

ಅಜ್ಜನಿಗೆ ಬೆಳಗ್ಗೆ ಸ್ನಾನ ಮುಗಿಸಿದ ಮೇಲೆ ಮೂಕಿಕಾಚ ಮತ್ತು ಲಂಗೋಟಿ ಅದಲು ಬದಲಾಗಬಹುದು ಎಂಬ ಅಸಾಧ್ಯ ಹಾಸ್ಯ ಹೆಚ್ಚು ನಗು ತರಿಸಲಿಲ್ಲ. ಜನರು ಆಸ್ಪತ್ರೆಗಳಲ್ಲಿ ಕಾಣುತ್ತಿದ್ದ ವಸ್ತುಗಳು ಸಾಮಾನ್ಯರ ಮನೆಯವರೆಗೆ ತಲುಪಲು ತಿಂಗಳು ಹಿಡಿಯಲಿಲ್ಲ.

ಹೆಸರಿನಿಂದಲೇ ಮೊದಲು ಕೌತುಕ ತಂದ ಮಾಸ್ಕನ್ನೂ ಮೊದಲು ಕಂಡುಹಿಡಿದವರು ಅದೇ ಚೀನಾದವರು, ಎನ್ನುವ ಮಾಹಿತಿ ಸಿಟ್ಟು ಹೆಚ್ಚಿಸುವ ವಿಷಯ.  ಮೊದಮೊದಲ ಮೂಕಿಕಾಚ ಹಾಕಿದ ಅನುಭವಗಳು ಹತ್ತು-ಹಲವು. ಬೀಡ - ಪಾನ್ ಸೇವಿಸುವವರಂತೂ ನಾಟಕದ ಹನುಮಂತನಂತೆ, ಬಾಯಿಯ ಸುತ್ತಲೂ ಕೆಂಪು ಬಣ್ಣ ಮಾಡಿಕೊಂಡು ನೀರಿನ ನಳ್ಳಿಯ ಬಳಿ ಓಡುತ್ತಿದ್ದರು. ಬಾಯಿಚಪ್ಪರಿಸಿದಾಗ ಖರೀದಿಸಿದ ಚಾಕಲೇಟನ್ನು ಅಥವಾ ಐಸ್ ಕ್ರೀಮ್ ಅನ್ನು, ಮಾಸ್ಕ್ ಹಾಕಿಕೊಂಡೇ ತಿಂದವರು, ಮತ್ತೆ ಪುನಃ ಮಾಸ್ಕ್ , ಚಾಕಲೇಟ್ ಮತ್ತು ಐಸ್ ಕ್ರೀಮ್ ಖರೀದಿಸಬೇಕಾಯಿತು. ಇದೀಗ ತರಕಾರಿ ಮತ್ತು ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳಲ್ಲೂ ಮಾಸ್ಕ್ ಸೇನಿಟೈಸರ್ ಗಳು ಮಾರಾಟಕ್ಕೆ ಲಭ್ಯವಿದೆ. ಮಾಸ್ಕ್ ಧಾರಣೆಯ ಅವಶ್ಯಕತೆ ತಿಳಿದಾಗ ಅಂಗಡಿಗಳಲ್ಲಿ ಮಾಸ್ಕ್ ಗಳ ಬೇಡಿಕೆ ಹೆಚ್ಚಾಗಿತ್ತು. ಆಗ ಅಂಗಡಿಯ ಮಾಲೀಕರು ಹೆಚ್ಚು ಹಣ ಕೊಟ್ಟು ಮಾಸ್ಕ್ ತರಿಸಿ, ಮಾರಾಟಕ್ಕೆ ಇಟ್ಟರು. ಅಂದು ಅಂಗಡಿಯ ಮಾಲಿಕ 25 ರೂಪಾಯಿ ಕೊಟ್ಟು ತಂದ ಮಾಸ್ಕ್, ಈಗ 10 ರೂಪಾಯಿಗೆ ಗ್ರಾಹಕರಿಗೆ ತಲುಪುತ್ತಿದೆ. ಅಂದು ತಂದ ಮಾಸ್ಕ್ ಹಿಂತಿರುಗಿಸಲೂ ಆಗದೆ, ಸೋತುಹೋದ ಅಂಗಡಿ ಮಾಲೀಕರು ಹಲವರು. ಮೊದಮೊದಲು ಅನಿವಾರ್ಯತೆಗೆ ಖರೀದಿಸುತ್ತಿದ್ದ ಜನರು, ಈಗ ಬೇಡಿಕೆ ಇಂದ ವೆರೈಟಿ ನೋಡುತ್ತಿದ್ದಾರೆ. ಹೆಂಗಸರು ಬಂದರೆ, "ಸಾರಿಗೆ ಮ್ಯಾಚ್ ಆಗುವ ಮಾಸ್ಕ್". ಮಕ್ಕಳು ಬಂದರೆ, "ಡಿಸೈನ್ ಮಾಸ್ಕ್". ಗಂಡಸರು ಬಂದರೆ, "ಕಡಿಮೆ ಹಣದ ಒಳ್ಳೆಯ ಮಾಸ್ಕ್!". ಆಕಡೆ "ಮಾಸ್ಕ್ ಹಾಕಿ ಅಭ್ಯಾಸ ಮಾಡಿಕೊಳ್ಳಿ" ಅಂತ ಅಧಿಕಾರಿಗಳ ಒತ್ತಡ ಬರುತ್ತಿದ್ದರೆ, ಈ ಕಡೆ ಕೆಲಸ ಕಳೆದುಕೊಂಡ ಗಂಡನಿಗೆ ಬ್ಯಾಗು ತುಂಬಾ ಮಾಸ್ಕ್ ಹೊಲಿದು ಕೊಟ್ಟು, ಹೆಂಡತಿ ಮನೆಯಿಂದ ಹೊರದಬ್ಬುತ್ತಿದ್ದಾಳೆ. ಮಾಸ್ಕ್ ಬಗ್ಗೆ ಪೀಠಿಕೆ ಹೀಗೆ ಮುಗಿಯುತ್ತದೆ.

(ಫೋಟೋ ಕೃಪೆ:- ಗೂಗಲ್)

ಮುಂದೆ ಮಾಸ್ಕ್ ಧಾರಣೆಯ ವೈವಿಧ್ಯತೆಯ ಬಗ್ಗೆ ಹೇಳುವುದಕ್ಕಿಂತ, ಪ್ಯಾಂಟ್ ಮೇಲೆ ಚಡ್ಡಿ ಹಾಕಿದ ಸೂಪರ್ ಮ್ಯಾನ್ ಬಗ್ಗೆ ಹೇಳುವುದು ಒಳ್ಳೆಯದು. "ಗೊತ್ತು ಮಾರಾಯ, ಸ್ವಲ್ಪ ಗಾಳಿ ತಗೊಂಡು ಆಮೇಲೆ ಸರಿಯಾಗಿ ಹಾಕ್ತೇನೆ" ಅಂತ ಹೇಳಿದರೆ, ಏನು ಮಾಡೋದು ಹೇಳಿ?. ಮನೆಗೆ ದಿನಸಿ ಸಾಮಾನುಗಳನ್ನು ಖರೀದಿಸಲು ಮಾರ್ಕೇಟ್ ಗೆ ಬರುವವರು ಮಾಸ್ಕ್ ಹಾಕುವುದು  ಸಣ್ಣ ಮಕ್ಕಳು ಚಡ್ಡಿ ಹಾಕಿಕೊಂಡ ಹಾಗೆ. ಇಲ್ಲಿ ಮುಚ್ಚಬೇಕೋ ಅಲ್ಲಿ ಹಾಕದೆ, ಇನ್ನೆಲ್ಲೋ ಹಾಕಿಕೊಂಡು ಸಂಚಾರ. ಕೆಲವರಂತೂ ಗಾಳಿ ಸಿಗುದಿಲ್ಲ ಅಂತ, ಬಲೆಯ ಹಾಗಿರುವ ಮಾಸ್ಕನ್ನು ಧರಿಸಿಕೊಂಡಿದ್ದಾರೆ. ಇನ್ನು ಕೆಲವರು ಮಾಸ್ಕ್ ಧರಿಸುವುದು ಸಂಚರಿಸುವಾಗ ಮಾತ್ರ. ಎಲ್ಲಿ ನಿಂತರೂ, ಯಾರು ಮಾತನಾಡಿಸಿದರೂ ರಪ್ಪ ಮಾಸ್ಕ್ ಜಾರಿಸುವುದೇ. ನಮ್ಮ ಜನರಿಗೆ ಏನೇ ಆದರೂ ಮಾಸ್ಕ್ ಮೂಗಿಗೆ ಹಾಕುವುದಕ್ಕೆ ಆಗುವುದೇ ಇಲ್ಲ. ಹೆಚ್ಚು ಅಂದರೆ ಬಾಯಿ ಮುಚ್ಚುತ್ತದೆ ಅಷ್ಟೇ. ಹೆಂಗಸರಂತೂ ಬಲೆಯಂತಹ ಬಟ್ಟೆ ತುಂಡೊಂದನ್ನು ಹಿಡಿದು, ಯಾರು ಹತ್ತಿರ ಬಂದರೂ ಮೂಗಿನಮೇಲೆ  ಅದನ್ನಿರಿಸಿ ಮಾತನಾಡುತ್ತಾರೆ. ನನ್ನ ಅರಿವಿನಂತೆ ಕೊರನಾ ಮತ್ತು ಮಿಡತೆಯ ವ್ಯತ್ಯಾಸ ಅವರಿಗೆ ಇನ್ನೂ ತಿಳಿದಿಲ್ಲ. ಎರಡೂ ಒಂದೇ ಸಮಯ ಪ್ರಚಾರ ಪಡೆದುಕೊಂಡ ಕಾರಣ, ಮಿಡತೆ ಗಾತ್ರದ ಕೊರೋನ ಬರುವಾಗ ಗೊತ್ತಾಗುತ್ತದೆ ಮತ್ತು ಆಗ ಮಾಸ್ಕ್ ಹಾಕಿದರಾಯಿತು ಎಂಬುದು ಅವರ ಚಿಂತನೆ. ಮೊನ್ನೆ ಒಬ್ಬ ಕುಡುಕನಂತೂ, ಇಡೀ ಪೇಟೆಗೆ ಪ್ರಚಾರ ಮಾಡುತ್ತಾ "ನಮ್ಮದು ಪರಶುರಾಮ ಭೂಮಿ, ಪರಶುರಾಮ ಭೂಮಿಯಲ್ಲಿ ಕೊರೋನ - ಗಿರೋನ ಎಲ್ಲ ಇರೋದಿಲ್ಲ" ಅಂತ ಬೊಬ್ಬಿರಿಯುತ್ತಿದ್ದ. ಕುಡಿದ ನಶೆ ಇಳಿದಾಗ "ಎಂತ ಮಾಡುದು ಸ್ವಾಮಿ?, ಲೋಕ ನಾಶವಾಗುತ್ತದೆ ನೋಡ್ತಾಯಿರಿ" ಅಂತ ಶಾಪ ಹಾಕುತ್ತಿದ್ದಾನೆ. ಈಗ ಮಾಸ್ಕ್ ಜೊತೆ ಗ್ಲೌಸ್ ಕೂಡ ಪ್ರಚಾರ ಪಡೆಯುತ್ತಿದ್ದು, ಅಂಗಡಿಗಳಲ್ಲಿ ಅವಶ್ಯಕತೆ ಎದ್ದುಕಾಣುತ್ತಿದೆ.

ಲಾಕ್ ಡೌನಿನ ಔದಾಸೀನ್ಯದ ಶಮನಕ್ಕಾಗಿ "ಮಾಸ್ಕಾಯನ"ವು ಹಾಸ್ಯಪೂರಿತವಾಗಿ ಬರೆಯಲು ಪ್ರಯತ್ನಿಸಿದ್ದರೂ, ಒಳಗೊಂಡ ವಿಷಯವನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ಪ್ರಸ್ತುತ ಜನಜೀವನದಲ್ಲಿ ಪ್ರಜ್ಞಾವಂತ ಯುವ ಪೀಳಿಗೆಯು, ಮಸ್ಕಿನ ಕುರಿತಾಗಿ ಜನರಲ್ಲಿ ಎಚ್ಚರಿಸುವ ಕಾರ್ಯವನ್ನು ಮಾಡಬೇಕಾಗಿದೆ. ರಾಮಾಯಣದಲ್ಲಿ ಕಂಟಕನಾಗಿದ್ದ ರಾವಣನನ್ನು ಗೆಲ್ಲುವುದಕ್ಕೆ ಶ್ರೀ ರಾಮಬಾಣವೇ ಬೇಕಾಗಿಬಂತು, ಈಗ ಲೋಕ ಕಂಟಕವಾಗಿ ಮೆರೆಯುತ್ತಿರುವ ಕರೋನವನ್ನು ಗೆಲ್ಲಲು ರಾಮಬಾಣವಾಗಿ ಮಾಸ್ಕನ್ನು ಉಪಯೋಗಿಸಬೇಕಾಗಿದೆ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

You may like these posts

  •                   ಅರಣ್ಯವು ಪ್ರಕೃತಿಯ ವಸ್ತುವೈಶಿಷ್ಟ್ಯತೆಗಳಲ್ಲಿ ಒಂದು. ವಿಕಾಸದ ಹಾದಿ ಹಿಡಿದ ವೈಜ್ಞಾನೀಕರಣ ಹಾಗೂ ನಗರೀಕರಣಗಳು ಈ ವಸ್ತುವೈಶಿಷ್ಟ್ಯತೆಗಳನ್ನು…
  • ಅನಿರೀಕ್ಷಿತವಾಗಿ ಸುಬ್ರಹ್ಮಣ್ಯ ಹೋಗುವ ಸಂದರ್ಭ ಒದಗಿ ಬಂತು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಊಟ ಮುಗಿಸಿ ಹೊರಬಂದು ಮತ್ತೆ ಬಸ್ ಸ್ಟ್ಯಾಂಡ್‌ಗೆ ಹೋಗುವ ದಾರಿ. ಸುಡುವ ಸೂರ್ಯನ ಬಿಸಿಲು ನೈಸ್ ಡಾಮರ್ ನೆಲದಲ್ಲಿ…
  • • ಮುನ್ನುಡಿ ಸ್ವಾತಂತ್ರ್ಯ, ಎಂಬುದು ರಾಷ್ಟ್ರದ ಸ್ವಚಿಂತನೆಯ ಅಧಿಕಾರಕ್ಕೆ ಮತ್ತು ದೇಶದ ನಾಗರಿಕರ ವಿಶಾಲ ಚಿಂತನೆಗೆ ಅವಕಾಶ ಒದಗಿಸುತ್ತದೆ. ನಾಗರಿಕರಿಗೆ ಒದಗಿಸಲ್ಪಟ್ಟ ಎಲ್ಲಾ ಅವಕಾಶಗಳು, ಸೌಲಭ್ಯ ಮತ್ತು ಚಲಾಯಿಸಬಹುದಾದ …
  • "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ", ಎಂಬ ಬಸವಣ್ಣನವರ ವಚನವು ಭಾವಾರ್ಥದ ಮುಖಾಂತರ ಅಜಗಜಾಂತರ ದೊಡ್ಡ ಅರ್ಥವನ್ನು ವಿವರಿಸುತ್ತದಾದರೂ, ಮೊಬೈಲ್ ಫೋನ್ ಇಂದು ಜನಮನದಾಳದಲ್ಲಿ ಹಾಸುಹೊಕ್ಕಾಗಿರುವ 'ಜಂಗಮ ಯಂತ್ರ' ಈ ನುಡಿ…
  •  ನಿನ್ನೆ ನಮ್ಮ ಮನೆಗೆ ಬಾಲಣ್ಣ ಮತ್ತು ಅವರ ಹೆಂಡತಿ ಮಧ್ಯಾಹ್ನದ ಹೊತ್ತಿಗೆ ಬಂದರು. ನಿನ್ನೆ ಭಾನುವಾರ ಆದಕಾರಣ ಅಪ್ಪ ಮಧ್ಯಾಹ್ನವೇ ಅಂಗಡಿ ಬಂದ್ ಮಾಡಿ ಮನೆಗೆ ಬಂದಿದ್ದರು.  ನಮ್ಮ ಮನೆಯ ಜಗಲಿಯಲ್ಲಿರುವ ಕಬ್ಬಿಣ…
  •            ದ್ವಾಪರ ಯುಗದಲ್ಲಿ ಅರ್ಜುನನು ಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ ತಪಸ್ಸಿಗೆ ಹೊರಟು, ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರು…

Post a Comment