• ಮುನ್ನುಡಿ
ಸ್ವಾತಂತ್ರ್ಯ, ಎಂಬುದು ರಾಷ್ಟ್ರದ ಸ್ವಚಿಂತನೆಯ ಅಧಿಕಾರಕ್ಕೆ ಮತ್ತು ದೇಶದ ನಾಗರಿಕರ ವಿಶಾಲ ಚಿಂತನೆಗೆ ಅವಕಾಶ ಒದಗಿಸುತ್ತದೆ. ನಾಗರಿಕರಿಗೆ ಒದಗಿಸಲ್ಪಟ್ಟ ಎಲ್ಲಾ ಅವಕಾಶಗಳು, ಸೌಲಭ್ಯ ಮತ್ತು ಚಲಾಯಿಸಬಹುದಾದ ಹಕ್ಕುಗಳು ಸ್ವಾತಂತ್ರ್ಯಾನಂತರ ರೂಪಿಸಿದ ಸಂವಿಧಾನದ ಕೊಡುಗೆಯಾಗಿದೆ. ಕಂಡಮಟ್ಟಿಗೆ ಪ್ರತ್ಯೇಕತಾವಾದ ಸಂವಿಧಾನದ ದೊಡ್ಡ ಸವಾಲಾಗಿದೆ. ಸ್ವಾತಂತ್ರ್ಯವು ಸಾಧಿಸಿಕೊಟ್ಟ ಸ್ವ-ಅಧಿಕಾರವನ್ನು ನಿತಂತ್ರಿಸಲು ಸಂವಿಧಾನ ಅಗತ್ಯ. ಆ ಸಂವಿಧಾನದ ರೂಪೀಕರಣ , ದೇಶದ ಸಾರ್ವಭೌಮತ್ವಕ್ಕೆ ಗೌರವಿಸಿ, ಬಹುಜನ ಅಭಿಮತದ ಅನ್ವಯ ಸಕ್ರಿಯವಾಯಿತು. ವೈವಿಧ್ಯತೆ ಎಂಬ ವಿಷಯವನ್ನು 'ಕೇವಲ' ಅಂತ ಕಾಣಲು ಸಾಧ್ಯವಿಲ್ಲ. ಇದೊಂದು ವಿಷಯ ಅದೆಷ್ಟೋ ಹಿರಿಮೆ ಗರಿಮೆಗಳಿಗೂ, ನಿಯಂತ್ರಣಾತೀತ ಸಂದಿಗ್ಧತೆಗೂ ಅವಕಾಶ ನೀಡುತ್ತದೆ.
ನನ್ನ ನಿಗಮನದಂತೆ ಸ್ವಾತಂತ್ರ್ಯದ ಆಶಯಗಳಿಗೆ ಎದುರಾಗಿ ಕಂಡುಬರುವ ವಾದಗಳ ಉದ್ಭವ ನಾಲ್ಕು ವಿಧಗಳಲ್ಲಾಗಿ ಮೈತಳೆಯುತ್ತದೆ. ಜಾತಿ, ಭಾಷೆ, ಪೀಳಿಗೆ ಮತ್ತು ರಾಜಕೀಯ ಪಕ್ಷ. ಎಲ್ಲಾ ವಿಧಗಳಲ್ಲೂ ವೈವಿಧ್ಯತೆಯೂ ಗಮನಾರ್ಹ ವಿಷಯ. ವಿವಿಧ ಜಾತಿ, ವಿವಿಧ ಭಾಷೆ, ವಿವಿಧ ಪೀಳಿಗೆ ಮತ್ತು ವಿವಿಧ ರಾಜಕೀಯ ಪಕ್ಷಗಳ ಮಧ್ಯೆ ಸಾಧಾರಣ ಇರುವ ವ್ಯತ್ಯಾಸಗಳು ಹಾಗೂ ವ್ಯಕ್ತಿಗತ ಅನುಭವ ಸಾಧ್ಯತೆಗಳಿಂದ ಉದ್ಭವಿಸುವ ಭಿನ್ನಾಭಿಪ್ರಾಯಗಳು ಸ್ವಾತಂತ್ರ್ಯದ ಆಶಯವನ್ನು ಅಥವಾ ಸಾಂವಿಧಾನಿಕ ಅಸಮರ್ಥತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ.
ಮೊದಲಾಗಿ ಜಾತಿ, ಯಾಕೆ ಮತಗಳ ಭಿನ್ನತೆಗಳಿಗಿಂತಲೂ ಹೆಚ್ಚಾಗಿ ಜಾತಿಗಳ ಭಿನ್ನತೆಯು ಸ್ವಾತಂತ್ರ್ಯದ ಆಶಯಕ್ಕೆ ಎದುರಾದಂತೆ ಕಾಣುವುದೆಂದರೆ, ಜಾತ್ಯಾತೀತ ಸಮಾಜದ ಜಾತಿ ಹೆಸರಿನ ವೈಷಮ್ಯ ಮತ್ತು ಮೇಲ್ಜಾತಿ, ಕೀಳ್ಜಾತಿಗಳೆಂಬ ಪಿಡುಗುಗಳು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಸಮಾನತೆ ಎಂಬ ತಕ್ಕಡಿಯಲ್ಲಿಟ್ಟು ಬಲಪ್ರಯೋಗಿಸಿ ಸರಿದೂಗಲಾಗಿದೆ. ಹೆಚ್ಚಾಗಿ ಸ್ವಾತಂತ್ರ್ಯ ಎದುರಾದ ಆಶಯಗಳ ಅವಿರ್ಭಾವವು ಈ ಹಂತದಲ್ಲಾಗಿದೆ. ಬಹು ಸಂಖ್ಯೆ, ನಾಯಕರ ಸಮಾನ ಆಶಯ ಮತ್ತು ಒಂದು ವಾದಕ್ಕೆ ಹೆಚ್ಚಾಗಿರುವ ಒಲವು ಮುಂತಾದ ಪ್ರೇರಣಾ ವಿಷಯಗಳಿಂದಾಗಿ 'ಸಂವಿಧಾನಿಕ ನಿಯಮ ಪಾಲನೆಯಲ್ಲಿ ತರ್ಕ ಬದ್ಧ ಲೋಪದೋಷವಿದೆ' ಎಂದು ಪರಿಗಣಿಸಿ (ಮೌನವಾಗಿ) ವಿರೋಧ ದಾರಿಯಲ್ಲಿ ಮುನ್ನುಗುತ್ತಾರೆ. ಸಮಾಜ 'ಸಾಂವಿಧಾನಿಕ ನಿಯಮ ಪಾಲನೆ ಆಗುತ್ತಿದೆಯೇ!' ಎಂದು ಗಮನಿಸುವಷ್ಟರಲ್ಲಿ ಯೋಜನೆ ಯೋಜನೆಗಳು ಕಾರ್ಯ ಸಾಧನೆ ಮಾಡಿ ಆಗಿರುತ್ತದೆ.
ಭಾಷೆ. ಭಾಷಾವಾರು ರಾಜ್ಯಗಳನ್ನಾಗಿ ವಿಂಗಡಿಸಿದ ಆಗಿನಿಂದ ಭಾಷಾ ಪ್ರಾಬಲ್ಯದ ಮೇಲೆ ನಿಯಮದ ದಬ್ಬಾಳಿಕೆ ನಡೆಯುತ್ತಿದೆ. ಗಡಿನಾಡು ಅಲ್ಪಸಂಖ್ಯಾತ ಒಳ ಭಾಷೆಗಳು ಸ್ವಾತಂತ್ರ್ಯದ ಆಶಯಗಳಿಗೆ ಪೂರಕವಾಗಿ ನಡೆಯಲು ಯತ್ನಿಸಿದರೂ, ಜನಬೆಂಬಲ ಹೊಂದಿದ ಮತ್ತು ವಿಶಾಲ ಅಧಿಕಾರ ಪರಿಧಿಯ ರಾಷ್ಟ್ರೀಯ ಅಂಗೀಕೃತ ಭಾಷೆಗಳು ದಬ್ಬಾಳಿಕೆ ನಡೆಸುತ್ತಿದೆ. 'ಸ್ವಾತಂತ್ರ್ಯದ ನೆಲೆ ಗಟ್ಟಿಗೊಳಿಸಲು ನಿಯಮ ರಚಿಸಿ, ಸಂವಿಧಾನ ಸರಿಯಾಗಿ ಪಾಲನೆ ಆಗಲು ಸಾರ್ವತ್ರಿಕರಣ ನಡೆಸಬೇಕಾಗುತ್ತದೆ' ಎಂದು ಹೇಳಿ, ಭಾಷಾ ಅಲ್ಪಸಂಖ್ಯಾತರಿಗೂ ಗಡಿನಾಡ ಜನತೆಗೂ ಅರ್ಹತೆಯಷ್ಟು ಸೌಲಭ್ಯ ಒದಗಿಸದೆ ಏನೂ ಆಗದಂತೆ ಮುಚ್ಚಿಬಿಡುತ್ತದೆ.
ಪೀಳಿಗೆ. ಪೀಳಿಗೆ ಎಂಬುದು ಸ್ವಾತಂತ್ರ್ಯದ ಆಶಯಗಳಲ್ಲಿ ಭಿನ್ನಾಭಿಪ್ರಾಯ ಮತ್ತು ಕಟುವಾದ ವಿರೋಧ ಭಾವದಿಂದ ಮುನ್ನಡೆಯುವಂತೆ ಮಾಡುತ್ತದೆ. ಮುಂದೆಂದೂ ಅನುಸರಿಸಿ ಗೌರವಿಸಿ ಎತ್ತಿ ಹಿಡಿಯುವಂತೆ ಸೃಷ್ಟಿಸಿರುವ ಸಂವಿಧಾನದ ಆಶಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಆಗುವ ಜೀವನ ಶೈಲಿಯ ಭಿನ್ನತೆಗಳಿಂದ ಕುಂಟು ನೆವ ಹುಡುಕುವಂತೆ ಮಾಡುತ್ತದೆ. 'ಅಂದು ಇದ್ದ ಬಹುತೇಕ ಟ್ರೆಂಡ್ ಗಳು ಈಗ ಯಾರಿಗೂ ಬೇಡವಾಗಿದೆ' ಎಂಬ ಉದಾಹರಣೆಯಿಂದಲೇ, 'ಅಂದಿನ ನಿಯಮ ಈಗ ಹೇಗೆ ಸರಿಯಾಗುತ್ತದೆ?' ಎಂದು ಪ್ರಶ್ನಿಸುವವರನ್ನು ಸೃಷ್ಟಿಸುತ್ತದೆ. ನವ ಪೀಳಿಗೆಯ ಅವಸರದ ವೇಗದ ಸಂಕ್ಷಿಪ್ತ ಮನಸ್ಥಿತಿಯ ಯಾಂತ್ರಿಕ ಜೀವನದಲ್ಲಿ, ಹಿಂದೆ ರಚಿಸಿ ಅನುಸರಿಸಬೇಕೆಂದು ಘೋಷಿಸಿದ ಸಂವಿಧಾನಕ್ಕೆ ಪ್ರಾಶಸ್ತ್ಯ ನೀಡಬೇಕೆಂದು ತೋರುವುದೂ ತೀರಾ ವಿರಳ. ಇಂತಹ ಸಂದಿಗ್ದ ಸಮಯಗಳಲ್ಲಿ ಆಶಯಕ್ಕೆ ವಿರುದ್ಧವಾದ ನೀತಿ ಯೋಜನೆ ಆದೇಶಗಳು ಹೊರಬರುತ್ತದೆ. ಬಹುಜನ ಮೆಚ್ಚುಗೆಗೆ ಪಾತ್ರವಾಗುವ ಈ ಯೋಜನೆಗಳ ಸಾಂವಿಧಾನಿಕ ನೆಲೆಯನ್ನು ಪರಿಗಣಿಸುವ ತಾಳ್ಮೆ ಯಾರಿಗೂ ಇರುವುದಿಲ್ಲ. ಅದೇ ರೀತಿ ಕೆಳ ವರ್ಗದ ಜೀವನ ನಡೆಸುವವರೂ ಮೇಲು ವರ್ಗದ ಜೀವನ ನಡೆಸುವವರೂ ಜೊತೆಗೆ ಮಧ್ಯದಲ್ಲಿ ನರಕ ಯಾತನೆ ಅನುಭವಿಸುವವರೂ ಅವರವರ ಸ್ವಾರ್ಥದ ಆಸೆಗೆ ಸಾಂವಿಧಾನದ ಕಗ್ಗೊಲೆ ನಡೆಸಲೆತ್ನಿಸುವುದು ವಿಷಾದನೀಯ.
ರಾಜಕೀಯ ಪಕ್ಷಗಳು ಎಂಬ ಕೊನೆಯ ವಿಭಾಗವನ್ನು ಪರಿಕಿಸಿದರೆ, ಅಧಿಕಾರ ಅವಧಿಯಲ್ಲಿ ಯೋಜನೆಗಳು ಹೇಗಿರಬೇಕು ಎಂದು ಮೊದಲೇ ಯೋಚಿಸಿ ತಯಾರು ಮಾಡಿರುತ್ತಾರೆ. ಒಮ್ಮೆ ಅಧಿಕಾರ ಕೈಗೆಟಕಿದರೆ ಸಾಕು ತಮ್ಮವರಿಗೆ, ತಮ್ಮ ಅನುಯಾಯಿಗಳಿಗೆ ಹಾಗೂ ತಮ್ಮ ಜನರು ಒಳಗೊಂಡ ವಿಭಾಗಕ್ಕೆ ಪೂರಕವೂ ಸಂತೃಪ್ತಿಯೂ ಆಗುವಂತೆ ನೀತಿ ನಿಯಮಗಳನ್ನು ತಿದ್ದಿ ಬರೆಯುತ್ತಾರೆ. ಸಾಂವಿಧಾನಿಕ ನೆಲೆಗಟ್ಟಿಗೆ ಪ್ರಾಶಸ್ತ್ಯ ಸಿಗದೆ, ಬಹುಮತದ ಹುಂಬತನಕ್ಕೆ ಬೆಲೆ ಸಿಗುತ್ತದೆ. ತಕರಾರು ಎಬ್ಬಿಸಿ ಅಧಿಕಾರದಲ್ಲಿರುವ ಪಕ್ಷವನ್ನು ದೂರುತ್ತಿರಬೇಕು ಎಂಬ ನಿಟ್ಟಿನಲ್ಲಾದರೂ, ವಿರೋಧ ಪಕ್ಷ ಇದನ್ನೆಲ್ಲಾ ಪ್ರಶ್ನಿಸದೆ ಬಿಡದು. ಆದರೆ ಅಧಿಕಾರಕ್ಕೆ ಬಂದರೆ ನಾವು 'ಅವರಕ್ಕಿಂತ ನಾವು ಕಡಿಮೆಯೇನಲ್ಲ' ಎಂದು ದೃಷ್ಟಾಂತ ಸಮೇತ ಸಾಧಿಸಿ ಮೀಸೆ ತಿರುಗಿಸುತ್ತವೆ .
ರಾಷ್ಟ್ರದ ಉನ್ನತೋನ್ನತ ಸಾಧನೆಗಳ ಹಿಂದೆ ಜನರು ಅಲಕ್ಷಿಸಿದ ಕೆಲವು ಸಂವಿಧಾನ ಪರಿಪಾಲನೆಯ ದೋಷಗಳನ್ನು ಹುಡುಕಬಹುದು. ಆದರೆ ಅದು ಸಂವಿಧಾನದ ತಿದ್ದುಪಡಿಗೆ ಅವಕಾಶ ಒದಗದೆ ಶಿಕ್ಷಾರ್ಹವೆಂದೂ ಪರಿಗಣಿಸದೆ ಮೌನ ತಾಳುವುದು ಬೇಸರದ ಸಂಗತಿ. ಯಾರು ಬಲಿಷ್ಠರೋ ಅವರು ಬದುಕುತ್ತಾರೆ ಇದು ಜಗದ ನಿಯಮ. ದೇಹ ಬಲಾಡ್ಯತೆ ಮಾತ್ರ ಬೇಕು ಎಂದಲ್ಲ, ಈ ತೀಕ್ಷ್ಣ ಬುದ್ಧಿಯೂ ಬಲಿಷ್ಠತೆಗೆ ಸಮ. ಯಾವುದೇ ನಿಬಂಧನೆಗಳಿಂದ ಬಂಧಿಸಲಿ, ಯಾವುದೇ ನೀತಿ ನಿಯಮಗಳಿಂದ ನಿಯಂತ್ರಿಸಲು ಯತ್ನಿಸಲಿ ಅಥವಾ ಯಾವುದೇ ಸಂವಿಧಾನದ ವಿಭಾಗಗಳು ಅರ್ಹತೆ - ಕರ್ತವ್ಯಗಳನ್ನು ಪಟ್ಟಿ ಮಾಡಲಿ, ಬದುಕುವ ಜೀವನವು ಬಯಸಿದ ಸ್ವಾರ್ಥ ಸಾಧನೆಯ ಹಾದಿಯಲ್ಲಿ ಇದೆಲ್ಲಾ ಅಲಕ್ಷ್ಯ.
ಇದಕ್ಕೆ ಉಪಸಂಹಾರವೇ ಇಲ್ಲವೇ?. ಇದೆ ನೋಡಿ. ದೇಶದ ವೈವಿಧ್ಯತೆಗೆ ನಮಿಸುವುದು ಹೆಮ್ಮೆಪಡುವುದು, ತಾನು ಬದುಕುವ ರೀತಿಯಲ್ಲಿ ಸಂತೃಪ್ತ ಭಾವ ಹಾಗೂ ಇತರರು ಬದುಕುವ ರೀತಿ 'ಅದು ಅವರದ್ದು' ಎಂಬ ಪರಿಗಣನೆ ಮನ್ನಣೆ ಇದ್ದರೆ ಸಾಕು. ನಾನು ನೋಡುವದನ್ನೇ ಅವರು ನೋಡಿದ್ದು ಹೌದಾದರೂ ನನ್ನ ನಿಗಮನದಂತೆ ಅವರದ್ದಿರಬೇಕು ಎನ್ನುವುದು ಮೂಢತನ. ರಾಷ್ಟ್ರದ ನಿಯಂತ್ರಣ ಅಷ್ಟು ಸುಲಭದ ಮಾತಲ್ಲ ಸಂವಿಧಾನದ ಚೌಕಟ್ಟು ಎಂಬುದು ಈ ರಾಷ್ಟ್ರದ ಗಟ್ಟಿ ಅಡಿಪಾಯ, ಬನ್ನಿ ಭವಿಷ್ಯ ಬರೆಯೋಣ…